ಉಡುಪಿ: ಉಡುಪಿ ಶ್ರೀ ಕೃಷ್ಣಮಠದಲ್ಲಿ ಇನ್ನು ಮುಂದೆ ಸಕ್ಕರೆ ಹಾಗೂ ಮೈದಾ ಬಳಸಿ ತಯಾರಿಸಿದ ಪ್ರಸಾದ- ಖಾದ್ಯಗಳು ಸಿಗದು. ಕಾರಣ ಇಲ್ಲಿ ಖಾದ್ಯಗಳ ತಯಾರಿಗೆ ಸಕ್ಕರೆ ಹಾಗೂ ಮೈದಾವನ್ನು ನಿಷೇಧಿಸುವಂತೆ ಪರ್ಯಾಯ ಪಲಿಮಾರು ಶ್ರೀಗಳು ಮಠದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಶ್ರೀಕೃಷ್ಣಮಠ ಪಾರ್ಕಿಂಗ್ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಯೋಗ ಶಿಬಿರದಲ್ಲಿ ಯೋಗಗುರು ಬಾಬಾ ರಾಮ್ದೇವ್ ಅವರು ಸಕ್ಕರೆ ಮತ್ತು ಮೈದಾ ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಜನರು ಇದರ ಬಳಕೆ ತ್ಯಜಿಸುವಂತೆ ಕರೆ ನೀಡಿದ್ದರು. ರಾಮ್ದೇವ್ ಅವರ ಸಲಹೆಯನ್ನು ಕೃಷ್ಣಮಠದಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪಲಿಮಾರು ಶ್ರೀಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸಕ್ಕರೆ ಹಾಗೂ ಮೈದಾ ಬದಲಿಗೆ ಬೆಲ್ಲ ಹಾಗೂ ಕಡ್ಲೆ ಹಿಟ್ಟು, ಗೋಧಿ ಹಿಟ್ಟನ್ನು ಬಳಸಲು ನಿರ್ಧರಿಸಲಾಗಿದೆ.
ವಿದೇಶಿ ತರಕಾರಿಗೂ ಇಲ್ಲ ಪ್ರವೇಶ: ಮಠದಲ್ಲಿ ಶತಮಾನಗಳಿಂದಲೂ ಪದಾರ್ಥಗಳಿಗೆ ಟೊಮ್ಯಾಟೊ, ಕ್ಯಾಬೇಜ್, ಹೂ ಕೋಸು, ಬೀಟ್ರೂಟ್, ಮೂಲಂಗಿ, ತೊಂಡೆಕಾಯಿ, ಈರುಳ್ಳಿ ಬೆಳ್ಳುಳ್ಳಿ ಮೊದಲಾದ ತರಕಾರಿಗಳನ್ನು ಬಳಸುತ್ತಿಲ್ಲ. ಇವು ವಿದೇಶಿ ಮೂಲದ ತರಕಾರಿಗಳಾಗಿರುವುದರಿಂದ ಸ್ವಾಮೀಜಿ ಹಾಗೂ ಶಿಷ್ಯವರ್ಗವಲ್ಲದೆ ಅನೇಕ ವಿದ್ವಾಂಸರು ಈ ತರಕಾರಿಗಳನ್ನು ಬಳಸಿದ ಪದಾರ್ಥ ಸ್ವೀಕರಿಸುವುದಿಲ್ಲ.