ಮಂಡ್ಯ ಮಾ.27:- ನಟ ದರ್ಶನ್ ಮಹಿಳೆಯರ ಬಗ್ಗೆ ಮಾತನಾಡಿದ್ದಾರೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಅಭ್ಯರ್ಥಿ ನಟಿ ಸುಮಲತಾ ಅಂಬರೀಷ್ ಸರಿಯಾಗಿಯೇ ಪ್ರತ್ಯುತ್ತರ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಸುಮಲತಾ, ಮಹಿಳೆಯರ ಬಗ್ಗೆ ಸಿಎಂ ಅಭಿಮಾನ ತೋರುತ್ತಿರೋದು ಸಂತೋಷದ ವಿಚಾರ. ಆದರೆ ನಾನು ಚುನಾವಣೆಗೆ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಅಣ್ಣ ರೇವಣ್ಣ ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿದಾಗ ಈ ಅಭಿಮಾನ ಎಲ್ಲಿ ಹೋಗಿತ್ತೋ ಎಂದು ವ್ಯಂಗ್ಯವಾಡುವ ಮೂಲಕ ಸಿಎಂ ಕುಮಾರಸ್ವಾಮಿ ಅವರ ಮಹಿಳಾಭಿಮಾನದ ಬಣ್ಣ ಬಯಲು ಮಾಡಿದ್ದಾರೆ. ಅಂಬರೀಶ್ ಸಮಾಧಿ ಸ್ಥಳ ಗುರುತಿಸಿದ್ದು ನಿಖಿಲ್ ಎಂಬ ಶಾಸಕ ಮುನಿರತ್ನ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಶಾಸಕ , ಚಿತ್ರ ನಿರ್ಮಾಪಕ ಮುನಿರತ್ನಗೆ ನೈತಿಕತೆ ಎಂಬುದೇ ಇಲ್ಲ.
ಭ್ರಷ್ಟಾಚಾರ, ಹಣದಿಂದ ಚುನಾವಣೆ ಮಾಡ್ತಾರೆ. ಸಾವಿನ ಹೆಸ್ರಲ್ಲಿ ರಾಜಕಾರಣ ಹೇಸಿಗೆ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಲಾಭಕ್ಕಾಗಿ ಇಂತಹ ಹೇಳಿಕೆ ಎಂದರು. ನಿಖಿಲ್ ಪರ ಡಿಕೆಶಿ ಬ್ಯಾಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ ನಿಖಿಲ್ ಬೆಂಗಳೂರಿನಿಂದ ಸ್ಪರ್ಧಿಸಬಹುದಿತ್ತು. ಅಂಬರೀಶ್ ಬಿಟ್ಟು ಮಾತಾಡೋಕೆ ಜೆಡಿಎಸ್ ನವ್ರಿಗೆ ವಿಷ್ಯವೇ ಇಲ್ವಾ.
ಟೀಕೆ ಮಾಡಿ ನಾನು ಸಹಿಸ್ತೇನೆ. ಆದರೆ ಜನ ಸಹಿಸಲ್ಲ ಎಂದರು. ದರ್ಶನ್ ಬಗ್ಗೆ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ದರ್ಶನ್ – ಯಶ್ ಏನು ತಪ್ಪು ಮಾಡಿದ್ದಾರೆ. ಕಷ್ಟ ಪಟ್ಟು ಮೇಲೆ ಬಂದಿರೋರು ಅವರು. ಯಶ್ ಜೆಡಿಎಸ್ ಪರ ಪ್ರಚಾರಕ್ಕೆ ಹೋದಾಗ ಆಗ್ಯಾಕೆ ಮಾತನಾಡಿಲ್ಲ.
ಗೌರವ ಮರ್ಯಾದೆಯಿಂದ ಚುನಾವಣೆ ನಡೆಸಲಿ. ವೈಯುಕ್ತಿಕ ಟೀಕೆ ಮಾಡೋದು ಸರಿಯಲ್ಲ. ನನ್ನ ಸ್ಪರ್ಧೆ ಜನಕ್ಕೋಸ್ಕರ. ಮಂಡ್ಯದ ಗಂಡು ನೋಡಿದ್ದಾರೆ. ಮಂಡ್ಯದ ಹೆಣ್ಣನ್ನು ನೋಡ್ತಾರೆ ಎಂದರು.
ಜೋಡೆತ್ತು ವಿಚಾರವನ್ನು ಏಕೆ ಪರ್ಸನಲ್ ಆಗಿ ತಗೋತಾರೆ, ದರ್ಶನ್, ಯಶ್ ಪ್ರಚಾರಕ್ಕೆ ಬರೋ ಬಗ್ಗೆ ಪ್ಲಾನ್ ನಡೆಸ್ಕೋತಿದ್ದೀವಿ. ಸದ್ಯದಲ್ಲೇ ತಿಳಿಸ್ತೀವಿ. ನನ್ನ ಪರ ದರ್ಶನ್, ಯಶ್ ಮಾತ್ರ ಪ್ರಚಾರ ಮಾಡ್ತಾರೆ. ನನ್ನ ಪರ ರಜನಿಕಾಂತ್ ಪ್ರಚಾರಕ್ಕೆ ಬರಲ್ಲ. ನಾನು ಕರೆದೂ ಇಲ್ಲ.
ರೈತ ಸಂಘದ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿ ರೈತ ಸಂಘಕ್ಕೆ ಧನ್ಯವಾದ ಅರ್ಪಿಸ್ತೇನೆ. ನನಗೆ ರೈತರ ಕಷ್ಟ ಗೊತ್ತಿದೆ. ರೈತ ಸಂಘದ ಬಲದಿಂದ ನನಗೆ ನೂರಾನೆ ಬಲ ಬಂದಿದೆ ಎಂದರು.